

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಯಲ್ಲಿ ಎಎಂಎಂಕೆ ಬೆಂಬಲವನ್ನು ಸುಳ್ಳು ಎಂದು ಬಿಂಬಿಸಲು ವಿಜಯ್ ನೇತೃತ್ವದ ಪಕ್ಷವು ನಕಲಿ ಬೆಂಬಲ ಪತ್ರವನ್ನು ಬಳಸುತ್ತಿದೆ ಎಂದು ಆರೋಪಿಸಿ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ತಮಿಳಗ ವೆಟ್ರಿ ಕಳಗಂ (ಟಿವಿಕೆ) ವಿರುದ್ಧ ಪೊಲೀಸ್ ದೂರು ದಾಖಲಿಸಿದೆ.
ಇದರಿಂದ ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕುರಿತಾದ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಎಎಂಎಂಕೆಯ ಏಕೈಕ ಶಾಸಕ ಎಸ್. ಕಾಮರಾಜ್ ಅವರ ಬೆಂಬಲದ ಕುರಿತು ಎರಡೂ ಪಕ್ಷಗಳ ನಡುವೆ ರಾಜಕೀಯ ಘರ್ಷಣೆ ಹೆಚ್ಚುತ್ತಿರುವ ಮಧ್ಯೆ ಈ ದೂರು ಬಂದಿದೆ.ಎಸ್. ಕಾಮರಾಜ್ ನಿನ್ನೆ ಸುದ್ದಿಗಾರರಿಗೆ ತಾವು ಟಿವಿಕೆಗೆ ಬೆಂಬಲ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದರ ನಡುವೆ, ಟಿಟಿವಿ ನಾಯಕ ದಿನಕರನ್ ತಮ್ಮ ಪಕ್ಷದ ಶಾಸಕ ಕಾಮರಾಜ್ ಅವರ ಪತ್ರದ ನಕಲಿ ಪ್ರತಿಯನ್ನು ಟಿವಿಕೆ ರಾಜ್ಯಪಾಲರಿಗೆ ನೀಡಿದೆ ಮತ್ತು ತಮ್ಮ ವಿರುದ್ಧ ಪೊಲೀಸ್ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದೆ ಎಂದು ಆರೋಪಿಸಿದ್ದರು.ಅದರ ಬೆನ್ನಲ್ಲೇ ಇಂದು ಟಿವಿಕೆ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ತಾವು ಸುಳ್ಳು ಹೇಳಿಲ್ಲ ಎಂದು ಸಾಬೀತುಪಡಿಸಲು ಟಿವಿಕೆ ವಿಜಯ್ ನೇತೃತ್ವದ ಪಕ್ಷವನ್ನು ಬೆಂಬಲಿಸಿ ಕಾಮರಾಜ್ ಬೆಂಬಲ ಪತ್ರ ಬರೆಯುತ್ತಿರುವ ವೀಡಿಯೊವನ್ನು ಬಿಡುಗಡೆ ಮಾಡಿತ್ತು. ಈ ವಿಡಿಯೋ ಕೂಡ ಎಐ ನಿರ್ಮಿತವಾದುದು ಎಂದು ಎಎಂಎಂಕೆ ಆರೋಪಿಸಿದೆ. ಎಎಂಎಂಕೆ ಶಾಸಕ ಕಾಮರಾಜ್ ಟಿವಿಕೆಗೆ ಬೆಂಬಲ ನೀಡಿ ಪತ್ರವನ್ನು ಬರೆಯುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಟಿವಿಕೆ ಹಂಚಿಕೊಂಡಿತ್ತು. ಅದರಲ್ಲಿ ಕಾಮರಾಜ್ ಅವರು ಎಎಂಎಂಕೆ ಪ್ರಧಾನ ಕಾರ್ಯದರ್ಶಿ ದಿನಕರನ್ ಅವರ ಅನುಮೋದನೆಯೊಂದಿಗೆ ಟಿವಿಕೆಗೆ ಬೆಂಬಲ ನೀಡುತ್ತಿರುವುದಾಗಿ ಹೇಳುತ್ತಿರುವುದನ್ನು ಕಾಣಬಹುದು.







