

ಬಂಟ್ವಾಳ: ಟೋಲ್ ಶುಲ್ಕ ಪಾವತಿಸದೆ ಟೋಲ್ ಗೇಟ್ ನ ಸೆನ್ಸಾರ್ ಬ್ಯಾರಿಯರ್ ಅನ್ನು ಮುರಿದು ಕಾರು ಚಲಾಯಿಸಿಕೊಂಡು ಹೋದ ಘಟನೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬ್ರಹ್ಮರಕೊಟ್ಲು ಟೋಲ್ ಗೇಟ್ ನಲ್ಲಿ ನಡೆದಿದೆ. ಸದ್ಯ ಟೋಲ್ ಗೇಟ್ ಸಹಾಯಕ ವ್ಯವಸ್ಥಾಪಕ ಯಶವಂತ ಕುಂದರ್ ಅವರು ನೀಡಿದ ದೂರಿನ ಮೇರೆಗೆ ಕಾರು ಚಾಲಕನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೋಲ್ ಶುಲ್ಕ ಪಾವತಿಸದ ಕಾರಣ ಸೆನ್ಸಾರ್ ಬ್ಯಾರಿಯರ್ ತೆರೆಯದೆ ವಾಹನವನ್ನು ತಡೆದಿತ್ತು. ಈ ವೇಳೆ ಕಾರಿನ ಚಾಲಕ ವಾಹನದಿಂದ ಇಳಿದು ಬಂದಿದ್ದು, ಟೋಲ್ ಸಿಬ್ಬಂದಿ ಶುಲ್ಕ ಪಾವತಿಸಿ ಮುಂದುವರಿಯುವಂತೆ ಸೂಚಿಸಿದ್ದಾರೆ. ಆದರೆ ಚಾಲಕ ಟೋಲ್ ಸಿಬ್ಬಂದಿಯನ್ನು ತಡೆದು ನಿಲ್ಲಿಸಿ, ಸೆನ್ಸಾರ್ ಗೇಟ್ ನ ಬಳಿಗೆ ತೆರಳಿ ಅದನ್ನು ಕೈಯಿಂದ ಮುರಿದು ಹಾಕಿ, ಬಳಿಕ ಕಾರನ್ನು ಚಲಾಯಿಸಿಕೊಂಡು ಸ್ಥಳದಿಂದ ತೆರಳಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.






