

ಮಂಗಳೂರು: ಪಾಂಡಿತ್ಯ ಲೋಕದ ಅದ್ಭುತ ವಿಸ್ಮಯ, ತನ್ನ 18ನೇ ವಯಸ್ಸಿನಲ್ಲೇ ಕಾಝಿ ಸ್ಥಾನ ಅಲಂಕರಿಸಿ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿಯಾಗಿ ಹಲವು ಅದ್ಭುತಗಳನ್ನು ಸೃಷ್ಟಿಸಿದ ಶೈಖುಲ್ ಜಾಮಿಅ ಶೈಖುನಾ ಆಲಿಕ್ಕುಟ್ಟಿ ಮುಸ್ಲಿಯಾರ್ ಅವರು ಅಲ್ಲಾಹನ ರಹ್ಮತ್ತಿನೆಡೆಗೆ ಯಾತ್ರೆಯಾಗಿರುವ ಸುದ್ದಿ ಸಮಾಜಕ್ಕೆ ತೀವ್ರ ದುಃಖವನ್ನು ತಂದಿದೆ.

ಈ ಮಹಾನ್ ವಿದ್ವಾಂಸರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಆಳವಾದ ಸಂತಾಪ ವ್ಯಕ್ತಪಡಿಸಿದೆ.
ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಸಿ. ಅಬ್ದುಲ್ ರೆಹ್ಮಾನ್ ಅವರು ಸಂತಾಪ ಸಂದೇಶದಲ್ಲಿ, “ಶೈಖುನಾ ಆಲಿಕ್ಕುಟ್ಟಿ ಮುಸ್ಲಿಯಾರ್ ಅವರ ನಿಧನವು ಇಡೀ ಸಮಾಜಕ್ಕೆ ಮತ್ತು ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ತಮ್ಮ ಜೀವನವನ್ನು ಇಸ್ಲಾಮಿಕ್ ಶಿಕ್ಷಣ, ಫಿಖ್, ಮತ್ತು ಸಮುದಾಯ ಸೇವೆಗೆ ಮುಡಿಪಾಗಿಟ್ಟಿದ್ದರು. ಅವರ ಮಾರ್ಗದರ್ಶನ ಮತ್ತು ವಿದ್ವತ್ತು ಮುಂದಿನ ತಲೆಮಾರಿಗೆ ಸದಾ ಪ್ರೇರಣೆಯಾಗಿರುತ್ತದೆ” ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಎಸ್. ಸುಲೇಮಾನ್ ಅಡ್ವಕೇಟ್ ಹಾಗೂ ಜಿಲ್ಲಾ ಕೋಶಾಧಿಕಾರಿ ರಿಯಾಝ್ ಹರೇಕಳ ಅವರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.
ಶೈಖುನಾ ಅವರು ಜಮ್ಇಯಾ ನೂರಿಯಾದ ಪ್ರಿನ್ಸಿಪಾಲ್, ಕಾಸರಗೋಡು ಕಾಝಿ, ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯ, ಹಜ್ ಕಮಿಟಿ ಅಧ್ಯಕ್ಷ ಸೇರಿದಂತೆ ಹಲವು ಪ್ರಮುಖ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದರು. ಸುನ್ನಿ ಯುವಜನ ಸಂಘದ ಪ್ರಧಾನ ಕಾರ್ಯದರ್ಶಿಯಾಗಿಯೂ ದಶಕಗಳ ಕಾಲ ಕಾರ್ಯನಿರ್ವಹಿಸಿದ್ದರು.
ಅವರ ಜ್ಞಾನ, ತಾಕ್ವಾ ಮತ್ತು ಸಮುದಾಯದ ಏಕತೆಗಾಗಿ ಮಾಡಿದ ಸೇವೆಗಳನ್ನು ಸಮುದಾಯ ಎಂದಿಗೂ ಮರೆಯುವುದಿಲ್ಲ.
ಅಲ್ಲಾಹು ಮರಹೂಂ ಅವರಿಗೆ ಜನ್ನತುಲ್ ಫಿರ್ದೌಸಿನ ಉನ್ನತ ಸ್ಥಾನವನ್ನು ದಯಪಾಲಿಸಲಿ. ಕುಟುಂಬಸ್ಥರಿಗೆ, ವಿದ್ಯಾರ್ಥಿಗಳಿಗೆ ಮತ್ತು ಇಡೀ ಸಮಸ್ತ ಸಮುದಾಯಕ್ಕೆ ಸೌಂದರ್ಯಪೂರ್ಣ ತಾಳ್ಮೆಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.






