Visitors have accessed this post 323 times.
ಬೆಳ್ತಂಗಡಿ: ಬೆಳ್ತಂಗಡಿ ವೇಣೂರಿನ ಸಾಲಿಡ್ ಫೈರ್ ವರ್ಕ್ ಎಂಬ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿರುವ ಭಾರೀ ಸ್ಫೋಟ ನಡೆದ ಸ್ಥಳಕ್ಕೆ ದ.ಕ. ಜಿಲ್ಲಾ ಎಸ್ಪಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಎಸ್ಪಿ ರಿಷ್ಯಂತ್ ಮಾತನಾಡಿ, ಇಂದು ಸಂಜೆ 5.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಕೇರಳ ಮೂಲದ ವರ್ಗೀಸ್(62), ಸ್ವಾಮಿ(60) ಹಾಗೂ ಹಾಸನ ಅರಸೀಕೆರೆ ಮೂಲದ ಚೇತನ್ (24) ಮೃತಪಟ್ಟಿದ್ದಾರೆ. ಈ ಸ್ಫೋಟದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು. 50 ಸೆಂಟ್ಸ್ ಸ್ಥಳದಲ್ಲಿ ಸಯ್ಯದ್ ಬಶೀರ್ ಎಂಬುವವರು ಪಟಾಕಿ ತಯಾರಿಸಲು ಪರವಾನಿಗೆ ಪಡೆದಿದ್ದರು.
2011-2012ರಲ್ಲಿ ಪಡೆದಿರುವ ಪರವಾನಿಗೆ 2019ರಲ್ಲಿ ನವೀಕರಣ ಆಗಿದೆ. 2024ರ ಮಾರ್ಚ್ ವರೆಗೂ ಲೈಸೆನ್ಸ್ ಸಿಂಧುತ್ವವಿದೆ. ಬೇಡಿಕೆಗೆ ತಕ್ಕಂತೆ ಪಟಾಕಿ ಇಲ್ಲಿ ಮಾಡಲಾಗುತ್ತಿತ್ತು ಅನ್ನುವ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪಟಾಕಿ ತಯಾರಿಸುವಾಗ ಯಾವ ಕಾರಣಕ್ಕೆ ಸ್ಫೋಟಗೊಂಡಿದೆ ಎಂಬ ಕಾರಣ ಇನ್ನೂ ತಿಳಿದು ಬಂದಿಲ್ಲ. ಮೊಬೈಲ್ ಫೋರೆನ್ಸಿಕ್ ಟೀಮ್, ಡಿಪಾರ್ಟ್ಮೆಂಟ್ ಆಫ್ ಎಕ್ಸ್ಪೋಸಿವ್ಸ್ ತಂಡ ಬಂದು ಪರಿಶೀಲಿಸಲಿದೆ ಎಂದು ಎಸ್ಪಿ ರಿಷ್ಯಂತ್ ಹೇಳಿದರು.