
ತ್ರಿಶೂರ್ (ಕೇರಳ): ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ನಟ- ರಾಜಕಾರಣಿ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಅವರು ಗೆಲುವು ಸಾಧಿಸಿದ್ದಾರೆ. ಈ ಮೂಲಕ ದಶಕಗಳ ಕಾಯುವಿಕೆಯ ಬಳಿಕ ಕೇರಳದಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ಲೋಕಸಭಾ ಖಾತೆ ತೆರೆದಿದೆ. ತ್ರಿಶೂರ್ನಲ್ಲಿ ಸಿಪಿಐನಿಂದ ಮಾಜಿ ಸಚಿವ ವಿ.ಎಸ್. ಸುನೀಲ್ ಕುಮಾರ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಕಣದಲ್ಲಿದ್ದರು. ಮೊದಲ ಸುತ್ತಿನಿಂದಲೇ ಸ್ಪಷ್ಟ ಮುನ್ನಡೆ ಸಾಧಿಸಿದ್ದ ಸುರೇಶ್ ಗೋಪಿ, ಇಬ್ಬರು ನಾಯಕರನ್ನು ಹಿಂದಿಕ್ಕಿ ಜಯ ಗಳಿಸಿದ್ದಾರೆ.



2019ರ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ನಿಂದ ಸ್ಪರ್ಧಿಸಿದ್ದ ಸುರೇಶ್ ಗೋಪಿ ಕಾಂಗ್ರೆಸ್ ಅಭ್ಯರ್ಥಿ ಟಿ.ಎನ್. ಪ್ರತಾಪನ್ ಎದುರು ಸೋಲನಭವಿಸಿದ್ದರು. ಮೋದಿ ಪರ ಅಲೆಯ ಗಾಳಿ ಕೇರಳದಲ್ಲೂ ಬೀಸಿದ್ದು, ತ್ರಿಶೂರ್ನಲ್ಲಿ ಸುರೇಶ್ ಗೋಪಿ ಗೆಲುವು ಸಾಧಿಸಿದರೆ, ತಿರುವನಂತಪುರದಲ್ಲಿ ಕಾಂಗ್ರೆಸ್ನ ಶಶಿ ತರೂರ್ ಹಾಗೂ ಬಿಜೆಪಿಯ ರಾಜೀವ್ ಚಂದ್ರಶೇಖರ್ ಅವರ ನಡುವೆ ಹಾವುಏಣಿ ಆಟ ನಡೆಯುತ್ತಿದೆ.