April 17, 2026
WhatsApp Image 2026-04-17 at 9.19.42 AM

ಬೆಂಗಳೂರು:  ರಸ್ತೆ ವಿವಾದ ಮತ್ತು ಹಲ್ಲೆ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ಮಾಜಿ ಸಂಸದ ಅನಂತ್‌ಕುಮಾರ್ ಹೆಗ್ಡೆ ಅವರ ಪುತ್ರ ಅಶುತೋಷ್ ಹೆಗ್ಡೆ ಅವರಿಗೆ ಕರ್ನಾಟಕ ಹೈಕೋರ್ಟ್ ದೊಡ್ಡ ಮಟ್ಟದ ಸಮಾಧಾನ ನೀಡಿದೆ. ಅಶುತೋಷ್ ವಿರುದ್ಧದ ಪೊಲೀಸ್ ತನಿಖೆ ಮತ್ತು ವಿಚಾರಣೆಗೆ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ.

ದಾಬಾಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಈ ಘಟನೆಯಲ್ಲಿ, ಅನಂತ್‌ಕುಮಾರ್ ಹೆಗ್ಡೆ ಅವರ ಕಾರನ್ನು ಓವರ್‌ಟೇಕ್ ಮಾಡುವ ವಿಚಾರದಲ್ಲಿ ಇನ್ನೋವಾ ಕಾರಿನಲ್ಲಿದ್ದ ಸೈಫ್ ಖಾನ್ ಮತ್ತು ಇತರರೊಂದಿಗೆ ಗಲಾಟೆ ನಡೆದಿತ್ತು. ಈ ವೇಳೆ ಸಂಸದರ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿತ್ತು. ಈ ದೂರಿನ ಆಧಾರದ ಮೇಲೆ ಪೊಲೀಸರು ಅಶುತೋಷ್ ಹೆಗ್ಡೆ ಸೇರಿದಂತೆ ಇತರರ ಮೇಲೆ ಎಫ್‌ಐಆರ್ ದಾಖಲಿಸಿದ್ದರು.

ಅಶುತೋಷ್ ಪರ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿ, “ಘಟನೆಯ ಸಮಯದಲ್ಲಿ ಅಶುತೋಷ್ ಕಾರಿನಿಂದ ಕೆಳಕ್ಕೆ ಇಳಿದಿರಲಿಲ್ಲ ಮತ್ತು ದೂರುದಾರರ ಮೇಲೆ ಹಲ್ಲೆ ನಡೆಸಿದ ಬಗ್ಗೆ ಅವರ ವಿರುದ್ಧ ಯಾವುದೇ ನೇರ ಆರೋಪಗಳಿಲ್ಲ. ಅವರು ಪ್ರಸ್ತುತ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಕ್ರಿಮಿನಲ್ ಪ್ರಕರಣ ದಾಖಲಾಗಿರುವುದರಿಂದ ಪಾಸ್‌ಪೋರ್ಟ್ ನವೀಕರಣಕ್ಕೆ ತೊಂದರೆಯಾಗುತ್ತಿದೆ,” ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಅಶುತೋಷ್ ಅವರ ಪಾತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಬಲವಾದ ಸಾಕ್ಷ್ಯಾಧಾರಗಳಿಲ್ಲದ ಕಾರಣ, ನ್ಯಾಯಮೂರ್ತಿಗಳು ಅವರ ವಿರುದ್ಧದ ತನಿಖೆಗೆ ತಡೆ ನೀಡಿದ್ದಾರೆ. ಅಲ್ಲದೆ, ಈ ಸಂಬಂಧ ರಾಜ್ಯ ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್ ಜಾರಿಗೊಳಿಸಿ ವಿವರಣೆ ಕೇಳಿದೆ. ಈ ತಡೆಯಾಜ್ಞೆಯಿಂದಾಗಿ ಅಶುತೋಷ್ ಅವರ ವಿದೇಶಿ ವ್ಯಾಸಂಗಕ್ಕೆ ಎದುರಾಗಿದ್ದ ಕಾನೂನು ಅಡ್ಡಿಗಳು ಸದ್ಯಕ್ಕೆ ದೂರಾದಂತಾಗಿದೆ.

About The Author

Leave a Reply