Visitors have accessed this post 110 times.

ಉಪ್ಪಿನಂಗಡಿ ಮಹಿಳೆ ಕೊಲೆ ಪ್ರಕರಣ: ಆರೋಪಿಗೆ ರಿಮಾಂಡ್ ಹೋಮ್

Visitors have accessed this post 110 times.

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪೆರ್ನೆ ಗ್ರಾಮದ ಬಿಳಿಯೂರಿನ ದರ್ಖಾಸು ನಿವಾಸಿ ಹೇಮಾವತಿ (37) ಭಾನುವಾರ ತಡರಾತ್ರಿ ಕುತ್ತಿಗೆ ಹಿಸುಕಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಅಪ್ರಾಪ್ತ ವಯಸ್ಕ ಬಾಲಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳಾವಧಿಗೆ ರಿಮಾಂಡ್ ಹೋಮ್ ಗೆ ಕಳುಹಿಸಿದೆ.

ಹೇಮಾವತಿ ಅವರ ಮನೆಯಲ್ಲಿ ಘಟನೆಯ ರಾತ್ರಿ ತಂಗಿದ್ದ ಅಕ್ಕನ ಮಗ, ಹತ್ತನೇ ತರಗತಿ ವಿದ್ಯಾರ್ಥಿ, ಅಪ್ರಾಪ್ತ ಬಾಲಕ ಹೇಮಾವತಿ ಮಲಗಿದಲ್ಲಿಗೆ ಹೋಗಿ ದೇಹ ಸುಖ ಬಯಸಿದ್ದು, ಇದಕ್ಕೆ ಹೇಮಾವತಿಯವರು ಪ್ರತಿರೋಧ ವ್ಯಕ್ತಪಡಿಸಿದ್ದರೆನ್ನಲಾಗಿದೆ. ನಾಳೆ ತನ್ನ ಕೃತ್ಯವನ್ನು ನೆರೆಹೊರೆಯವರಿಗೆ ತಿಳಿಸಿದರೆ ತಾನು ಅವಮಾನಿತನಾಗುವ ಸಾಧ್ಯತೆ ಇದೆ ಎಂದು ಅಂಜಿಕೆಯಿಂದ ಈ ಬಾಲಕ ಆಕೆಯನ್ನು ಕೊಲ್ಲುವ ನಿರ್ಧಾರ ತಾಳಿದ್ದ. ಸುಮಾರು ಅರ್ಧ ಗಂಟೆಯ ಬಳಿಕ ನಿದ್ರೆಗೆ ಜಾರಿದ್ದ ಚಿಕ್ಕಮ್ಮನ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆಗೈದಿದ್ದ. ಚಿಕ್ಕಮ್ಮ ಮೃತಪಟ್ಟಿರುವುದು ದೃಢವಾದೊಡನೆ ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ತಾನೇ ಮೊದಲಾಗಿ ತನ್ನ ತಂದೆಗೆ ತಿಳಿಸಿ ಪಾರಾಗಲು ಯತ್ನಿಸಿದ್ದ. ಆದರೆ ಕುತ್ತಿಗೆ ಹಿಸುಕಿದ ವೇಳೆ ಆಕೆ ಪ್ರಾಣ ರಕ್ಷಣೆಗಾಗಿ ಬಾಲಕನಿಗೆ ಪರಚಿದ್ದು, ಈ ಪರಚಿದ ಗಾಯವೇ ಪೊಲೀಸರು ಸಾಕ್ಷಿಯಾಗಿತ್ತು.

ಬಂಟ್ವಾಳ ತಾಲೂಕು ಮಾಣಿ ಗ್ರಾಮದ ವಿಠಲ ಪೈ ಯಾನೆ ಶೈಲೇಶ್ ಎಂಬವರನ್ನು ವಿವಾಹವಾಗಿದ್ದ ಹೇಮಾವತಿಯವರು ಗಂಡನ ಕುಡಿತದ ಚಟದಿಂದ ಬೇಸತ್ತು ಗಂಡನಿಂದ ದೂರವಾಗಿದ್ದರು. ಹಾಗೂ ವಿವಾಹ ವಿಚ್ಚೇದನಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಅದು ವಿಚಾರಣಾ ಹಂತದಲ್ಲಿತ್ತೆನ್ನಲಾಗಿದೆ. ಹೋಟೇಲೊಂದರಲ್ಲಿ ಕೆಲಸ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದ ಈಕೆ ತನ್ನ ತಾಯಿ ಮನೆಯಲ್ಲಿ ವಾಸ್ತವ್ಯವನ್ನು ಹೊಂದಿದ್ದು, ಮಗನಂತಿದ್ದ ಅಕ್ಕನ ಮಗನೇ ಮೃಗೀಯ ವರ್ತನೆ ತೋರಿ ಆಕೆಯ ಸಾವಿಗೆ ಕಾರಣವಾಗಿರುವುದು ಮಾತ್ರ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

Leave a Reply

Your email address will not be published. Required fields are marked *